ಬೆಚ್ಚಗಿನ ಬಿಸಿಲಿನ ಹೊಂಬಣ್ಣದ ದಿನದಲ್ಲಿ ಗಾಳಿಗೆ ತೊನೆದಾಡುವ ಎತ್ತರದ ಹೂವುಗಳ ಹಾಸಿರುವ, ಮಂಜಿನಿಂದ ಮುಸುಕಿದ ಗಿರಿಶಿಖರಗಳ ಹಿನ್ನೆಲೆಯಲ್ಲಿ ಕಂಗೊಳಿಸುವ ಹುಲ್ಲುಗಾವಲು ಪ್ರದೇಶವು ನೋಡುವುದೇ ಕಣ್ಣಿಗೆ ಹಬ್ಬ! ಈ ಪ್ರವಾಸೀ ತಾಣಗಳು ಎಷ್ಟು ವರ್ಣಮಯವಾಗಿರುತ್ತವೆ ಎಂದರೆ ಇಲ್ಲಿ ಕಳೆಯುವ ಸಮಯ ತೃಪ್ತಿಆಗುವಷ್ಟು ಛಾಯಾಚಿತ್ರಗಳನ್ನು ಸೆರೆಹಿಡಿಯಲೂ ಸಾಲದು!
* ಭಾರತದ ಅತ್ಯಂತ ಸುಂದರ ರಾಷ್ಟ್ರೀಯ ಉದ್ಯಾನವನ
ಸಮುದ್ರ ಮಟ್ಟದಿಂದ ಸುಮಾರು 3,858 ಮೀಟರುಗಳ ಎತ್ತರದಲ್ಲಿ ಇರುವ ಈ ಪುಷ್ಪ ಕಣಿವೆ-ವ್ಯಾಲಿ ಆಫ್ ಫ್ಲವರ್ಸ್-ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ- ವರ್ಲ್ಡ್ ಹೆರಿಟೆಜ್ ಸೈಟ್- ಎಂದು ಗುರುತಿಸಲ್ಪಟ್ಟ ತಾಣವಾಗಿದೆ. ಇದು ಪೂರ್ವ ಹಾಗೂ ಪಶ್ಚಿಮ ಹಿಮಾಲಯದ ನಡುವಿನ ಪರಿವರ್ತನಾ ವಲಯದಲ್ಲಿ ನೆಲೆನಿಂತಿದೆ. ನಂದಾ ದೇವಿ ಬಯೋಸ್ಫಿಯರ್ ರಿಸರ್ವ್ ನ ಭಾಗವಾಗಿರುವ ಘಂಗ್ರಿಯಾದಿಂದ ಪುಷ್ಪ ಕಣಿವಯ ಚಾರಣ ಮಾರ್ಗದುದ್ದಕ್ಕೂ ಸುವಾಸನಾಭರಿತ ಕಾಡು ಹೂವುಗಳು, ಕಾಡು ಗುಲಾಬಿ ಪೊದೆಗಳು ಮತ್ತು ಕಾಡು ಸ್ಟ್ರಾಬೆರಿ ಹಣ್ಣಗಳ ಗಿಡಗಳು ಸ್ವಾಗತ ಕೋರುತ್ತವೆ.
* ಇಲ್ಲಿ ನಿಮಗೆ ಹೇರಳವಾದ ಜೀವ ವೈವಿಧ್ಯವು ಕಣ್ಣಿಗೆ ಬೀಳುತ್ತದೆ
300 ಕ್ಕೂ ಹೆಚ್ಚು ಸಸ್ಯ ಪ್ರಬೇಧಗಳನ್ನು, ಅಳಿವಿನಂಚಿನಲ್ಲಿರುವ ಹಾಗೂ ಔಷಧೀಯ ಸಸ್ಯಗಳನ್ನು ಒಳಗೊಂಡು, ಈ ಕಣಿವೆಯು ಮಂಜುಮುಸುಕಿದ ಹಿಮಾಲಯ ಶಿಖರಗಳ ಹಿನ್ನೆಲೆಯೊಂದಿಗೆ ಹಲವು ಬಣ್ಣಗಳನ್ನು ಮೈದುಂಬಿಕೊಂಡು ಕಂಗೊಳಿಸುತ್ತದೆ. ಏಶಿಯಾದ ಕಪ್ಪು ಕರಡಿ, ಕೆಂಬಣ್ಣದ ನರಿ, ಹಾಗೂ ನೀಲಿ ಕುರಿ ಇವೇ ಮೊದಲಾದ ಕೆಲವು ಅಳಿವನಂಚಿನಲ್ಲಿರವ ಪ್ರಾಣಿವರ್ಗವನ್ನೂ ಈ ಚಾರಣ ಮಾರ್ಗದಲ್ಲಿ ಕಾಣಬಹುದಾಗಿದೆ.
* ಚಿತ್ರಪಟದಂತಿರುವ ಹಿಮಾಲಯದ ಚಾರಣ ಮಾರ್ಗದುದ್ದಕ್ಕೂ ನಡೆಯಿರಿ.
ಕಣಿವೆಯನ್ನು ತಲಪುವ ಅನುಭವವು ತುಸು ತ್ರಾಸದಾಯಕವಾಗಿದ್ದರೂ, ಕಣಿವೆಯ ನೋಟ ನಿಮ್ಮಲ್ಲಿ ಆಡ್ರಿನಾಲಿನ್ ಹುಚ್ಚೆದ್ದು ಹರಿಯುವಂತೆ ಮಾಡುವುದಂತೂ ಖಚಿತ. ಹರಿದ್ವಾರ/ರಿಶಿಕೇಶದಿಂದ ಆರಂಭಿಸಿ ಅದರ ಬೇಸ್ ಕ್ಯಾಂಪ್ (ಶಿಬಿರ) ಗೋವಿಂದ ಘಾಟಿನಲ್ಲಿ ತಳವೂರಿದ್ದು, ಅಲ್ಲಿಂದ ಪ್ರಧಾನ ಕ್ಯಾಂಪ್ (ಶಿಬಿರ) ಗ್ರೌಂಡ್ ಆಗಿರುವ ಘಂಗರಿಯಾದ ಮೂಲಕ ಪುಷ್ಪ ಕಣಿವೆಯೆಡೆಗೆ ಚಾರಣಮಾರ್ಗವಿದೆ.
* ಪ್ರಕೃತಿ ತನ್ನ ಸೌಂದರ್ಯದ ಶೃಂಗದಲ್ಲಿರುವಲ್ಲಿ!
ಈ ರಕ್ಷಿತ ಪ್ರದೇಶದೊಳಗಿನ ಒಂದು ಹೆಜ್ಜೆ ನಿಮ್ಮನ್ನು ಸೂರೆಗೊಳ್ಳುವುದು ಖಂಡಿತ. ಶಿಲೆ, ಕಲ್ಲುಗಳ ಹಾದಿಯ ನೋಟ, ಪುಟ್ಟ ತೊರೆಗಳು, ಧುಮ್ಮಿಕ್ಕುವ ಜಲಪಾತಗಳು, ಹಾಗೂ ಎರಡೂ ಕಡೆಗಳಲ್ಲಿ ಕಣಿವೆಯನ್ನು ಕಾವಲು ಕಾಯುವ ಸೈನಿಕರಂತೆ ಕಂಗೊಳಿಸುವ ಹಿಮಾಲಯ ಹಾಗೂ ಝನ್ಸ್ಕಾರ್ ಪರ್ವತ ಶ್ರೇಣಿಗಳುನಿಮ್ಮ ಕಣ್ಮನ ಸೆಳೆಯುವುದಂತೂ ನಿಸ್ಸಂಶಯ.
* ಹೇಮಕುಂಡ ಸಾಹಿಬ್ ನ ಪುಣ್ಯತೀರ್ಥದಲ್ಲಿ ಮುಳುಗೇಳಿ
ಪುಷ್ಪ ಕಣಿವೆಯ ಕಡೆಗಿನ ಚಾರಣ ಹಾದಿಯಲ್ಲಿ ಹೇಮಕುಂಡ ಸಾಹಿಬ್ ಗುರುದ್ವಾರವೂ ಇದೆ. ವರ್ಷದ 6 ತಿಂಗಳು ಮುಚ್ಚಿಕೊಂಡಿರುವ ಈ ಗುರುದ್ವಾರಕ್ಕೆ ಭೇಟಿ ನೀಡುವುದಕ್ಕಾಗಿ ಒಂದು ದಿನವನ್ನು ಕಾದಿರಿಸಿ. ಅದರ ಸುತ್ತಮುತ್ತಲಿನ ಪುಣ್ಯಕ್ಷೇತ್ರವನ್ನು ಭೇಟಿ ಮಾಡದೆ ಇದ್ದರೆ ಪುಷ್ಫಕಣಿವೆಯ ನಿಮ್ಮ ಚಾರಣ ಅಪೂರ್ಣವಾದಂತೆಯೇ ಸರಿ. ಜುಲಾಯಿಯ ಸಮಯದಲ್ಲಿ ಕಣಿವೆಯು ಸಂಪೂರ್ಣವಾಗಿ ಹೂವುಗಳಿಂದ ತುಂಬಿ ತುಳುಕುತ್ತದೆ. ಆದುದರಿಂದ ಈ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳದಿರಿ!
ಪ್ರಯಾಣಕ್ಕೆ ಕಿವಿಮಾತು:
ಅತ್ಯುತ್ತಮ ಸಮಯ: ಜುಲಾಯಿ-ಸೆಪ್ಟೆಂಬರ್
ಬೇಸ್ ಕ್ಯಾಂಪ್: ಬದ್ರೀನಾಥ ಹೆದ್ದಾರಿಯಲ್ಲಿರುವ ಗೋವಿಂದ ಘಾಟ್
ಸಮೀಪದ ವಿಮಾನ ನಿಲ್ದಾಣ: ಜಾಲಿ ವಿಮಾನ ನಿಲ್ದಾಣ, ಡೆಹ್ರಾಡುನ್
ಸಮೀಪದ ರೈಲ್ವೇ ಸ್ಟೇಶನ್: ಹರಿದ್ವಾರ ಜಂಕ್ಷನ್ ರೈಲ್ವೇ ಸ್ಟೇಶನ್
ಬೇಸ್ ಕ್ಯಾಂಪಿಗೆ ತಲಪುವುದು-ದೂರ: 294 ಕಿಮೀ, ಹಾದಿ:-ಹರಿದ್ವಾರ-ರಿಶಿಕೇಶ-ದೇವಪ್ರಯಾಗ-ರುದ್ರಪ್ರಯಾಗ-ಕರ್ಣಪ್ರಯಾಗ-ಚಮೋಲಿ-ಜೋಶಿಮಠ-ಗೋವಿಂದ ಘಾಟ್
ಪುಷ್ಪ ಕಣಿವೆಯೆಡೆಗೆ-ಗೋವಿಂದ ಘಾಟಿನ ನಂತರ, ನಿಮ್ಮ ಚಾರಣ ಹಾದಿಗೆ ಕ್ಯಾಂಪಿಂಗ್ ಗ್ರೌಂಡ್ ಆಗಿರುವ ಘಂಗರಿಯಾದ ಮೂಲಕ ಪುಷ್ಫ ಕಣಿವೆಯೆಡೆಗೆ ಸುಮಾರು 23 ಕಿಮೀ ಚಾರಣವಿದೆ.