ದೇಶದ ಉದ್ದಗಲಕ್ಕೂ ಹಲವಾರು ಶಿವ ದೇವಸ್ಥಾನಗಳಿವೆ. ಆದರೆ ಅತ್ಯಂತ ಪುರಾತನ ದೇಗುಲದ ವಿಚಾರಕ್ಕೆ ಬಂದಾಗ, ಮಗಧದ ಬರಾಬರ್ ಬೆಟ್ಟಗಳಲ್ಲಿ ನೆಲೆ ನಿಂತಿರುವ ಸಿದ್ಧೇಶ್ವರ ದೇವಾಲಯವು ಮೊದಲ ಸ್ಥಾನ ಪಡೆಯುತ್ತದೆ. ಇದು ಸಿದ್ದೇಶ್ವರನಾಥ ತೀರ್ಥಯಾತ್ರಾ ಸ್ಥಾನವೆಂದು ಪ್ರಸಿದ್ಧಿ ಪಡೆದಿದೆ. ಮಹಾಭಾರತದ ಕಾಲಾವಧಿಯಲ್ಲಿ ರಚನೆಯಾಗಿದ್ದು, ಇನ್ನೂ ಜೀವಂತವಾಗಿ ಉಳಿದಿರುವ ಈ ದೇವಸ್ಥಾನವು ತನ್ನ ಪುರಾತನ ಧರ್ಮಗ್ರಂಥಗಳಲ್ಲಿ ಪಡಿಮೂಡಿಸಿರುವಂತಹ ಪ್ರಾರ್ಥನಾ ವಿಧಿಗಳನ್ನು ಇನ್ನೂ ಉಳಿಸಿಕೊಂಡಿದೆ. ಸ್ವ-ಆವಿರ್ಭೂತವಾದ ಒಂಬತ್ತು ಆತ್ಮ ಲಿಂಗಗಳಲ್ಲಿಇದೂ ಒಂದಾಗಿದೆ. ಶಿವಭಕ್ತ ವನಾಸುರನೊಂದಿಗೆ ಇಲ್ಲಿನ ಪೂಜಾ ವಿಧಿಗಳು ಹೊಂದಿಕೊಂಡಿರುವುದರಿಂದ, ಅದು ವನೇಶ್ವರ ಮಹಾದೇವನೆಂದೂ ಪ್ರಸಿದ್ಧಿ ಪಡೆದಿದೆ. ಹಲವು ಮೆಟ್ಟಿಲುಗಳನ್ನು ಏರಿ ದೇಗುಲವನ್ನು ತಲಪಬೇಕಿದೆ.
ಬರಾಬರ್ ಬೆಟ್ಟಗಳು ಭಾರತದ ಪುರಾತನ ಬೆಟ್ಟಗಳ ಸಾಲಿನಲ್ಲಿ ಒಂದಾಗಿವೆ. 1100 ಅಡಿಗಳಷ್ಟು ಎತ್ತರದ ಈ ಬರಾಬರ್ ಬೆಟ್ಟಗಳು ಮಗಧದ ಹಿಮಾಲಯವೆಂದೇ ಹೆಸರುವಾಸಿಯಾಗಿವೆ. ಇಲ್ಲಿ ಏಳು ಅತ್ಯದ್ಭುತ ಗುಹೆಗಳನ್ನು ರಚಿಸಲಾಗಿದೆ. ಇವುಗಳನ್ನು ಬ್ರಿಟಿಷರ ಕಾಲದಲ್ಲಿ ಪತ್ತೆ ಮಾಡಲಾಯಿತು. ಏಳರಲ್ಲಿ ನಾಲ್ಕು ಬರಾಬರ್ ಗುಹೆಗಳೆಂದೇ ಗುರುತಿಸಲಾಗಿದ್ದು, ಉಳಿದ ಮೂರು ನಾಗಾರ್ಜುನ ಗುಹೆಗಳೆಂದು ಕರಯಲ್ಪಡುತ್ತವೆ. ಇವು ಭಾರತದಲ್ಲೇ ಅತ್ಯಂತ ಹಳೆಯ ಶಿಲಾರಚಿತ ಗುಹೆಯಾಗಿದೆ. ಪ್ರವಾಸೀ ತಾಣಗಳ ದೃಷ್ಟಿಯಿಂದ ಇವು ಅತ್ಯಂತ ಗಮನಾರ್ಹವಾಗಿದೆ. ಪುರಾತನ ಕಾಲದಿಂದಲೂ ಇವು ಪ್ರವಾಸಿಗರಿಗೆ ಸದಾಹಸಿರು ತಾಣವೆಂದೇ ಪ್ರಸಿದ್ಧಿ ಪಡೆದಿವೆ. ದಂತಕಥೆಗಳಿಗೆ ಅನುಸಾರವಾಗಿ, ಬೆಟ್ಟಗಳಲ್ಲಿರುವ ಗುಹೆಗಳನ್ನು ಭದ್ರ ವಾತಾವರಣದಲ್ಲಿ ಧ್ಯಾನಮಾಡುವುದಕ್ಕೆಂದು ಸಾಧು ಸಂತರಿಗಾಗಿ ರಚಿಸಲಾಯಿತು.
ಗಯಾ ಜೆಹಾನಾಬಾದ್ ಗಡಿಯಲ್ಲಿರುವ, ಸಾಮ್ರಾಟ ಅಶೋಕನ ಆಡಳಿತಾವಧಿಯ ಕಾಲದ, ಈ ಗುಹೆಗಳು ಕರ್ಣ ಛಪ್ಪರ, ಸುದಾಮ ಗುಹೆ, ಲೋಮಸ ಋಷಿ ಗುಹೆ ಮತ್ತು ನಾಗಾರ್ಜುನ ಗುಹೆಗಳನ್ನು ಒಳಗೊಂಡಂತೆ ಏಳು ರಚನೆಗಳನ್ನು ಹೊಂದಿವೆ. ಆಸಕ್ತಿಯ ವಿಷಯವೆಂದರೆ, ಕರ್ಣ ಛಪ್ಪರ, ಸುದಾಮ ಗುಹೆ ಹಾಗೂ ಲೋಮಸ ಋಷಿ ಗುಹೆಗಳು ಏಕಶಿಲಾ ರಚನೆಗಳಾಗಿವೆ. ನೋಡಲು ಅದ್ಭುತವಾಗಿರುವ ಈ ಗುಹೆಗಳು ಪುರಾತನ ಕಾಲದ ವಾಸ್ತುವಿನ್ಯಾಸ ಕೌಶಲದ ಪ್ರತೀಕಗಳಾಗಿವೆ. ಗುಹೆಯೊಳಗೆ ನಿಂತು ಗಟ್ಟಿಯಾಗಿ ಕೂಗುಹಾಕಿದರೆ ಹಲವು ಪ್ರತಿಧ್ವನಿಗಳು ಪ್ರತ್ಯುತ್ತರ ನೀಡುತ್ತವೆ. ಇದು ಪ್ರವಾಸಿಗರಿಗೆ ಮೋಜಿನ ವಿಚಾರವಾಗುತ್ತದೆ.
ಸುದಾಮ ಗುಹೆ
ಸುದಾಮ ಗುಹೆಗಳನ್ನುಸಾಮ್ರಾಟ ಅಶೋಕನ ಪಟ್ಟಾಭಿಶೇಕದ 12ನೆಯ ವರ್ಷದಲ್ಲಿ ರಚಿಸಲಾಯಿತು. ಈ ಗುಹೆಗಳನ್ನು ಋಷಿಗಳಿಗಾಗಿ ರಚಿಸಲಾಯಿತು. ಈ ಗುಹೆಯೊಳಗೆ ವೃತ್ತಾಕಾರ ಕಮಾನು ರಚನೆ ಇರುವ ಕೋಣೆಯಲ್ಲಿ ಒಂದು ಚೌಕಾಕೃತಿಯ ಮಂಟಪವಿದೆ.
ಲೋಮಸ ಗುಹೆ
ಲೋಮಸ ಮುನಿಯ ಪ್ರಸಿದ್ಧ ಗುಹೆಯು ಸಹ ಸಾಮ್ರಾಟ ಅಶೋಕನಿಂದಲೇ ರಚಿಸಲ್ಪಟ್ಟಿತು. ಇದರಲ್ಲಿ ಮಿಶ್ರ ವಾಸ್ತುಶಿಲ್ಪ ಕಂಡುಬರುತ್ತಿದ್ದು, ಆ ಕಾಲದ ಭಾರತದ ಅತ್ಯಂತ ಮಹತ್ವದ ವಾಸ್ತು ಶಿಲ್ಪಕಲೆಯ ಪ್ರತೀಕವಾಗಿದೆ. ಗುಹೆಯಲ್ಲಿರುವ ಕಮಾನು ರಚನೆಯು ಆ ಕಾಲದಲ್ಲಿ ಮೂಡಿಸುತ್ತಿದ್ದ ಮರದ ಕೆತ್ತನೆ ಕೆಲಸವನ್ನೇ ನಕಲು ಮಾಡುತ್ತದೆ. ದ್ವಾರದಲ್ಲಿರುವ ಆನೆಗಳ ಸಾಲು ವಕ್ರವಾಗಿರವ ಹಾದಿಯ ಉದ್ದಕ್ಕೂ ಮುಂದವರಿಯುತ್ತದೆ. ಪ್ರಧಾನ ಗುಹೆಯೊಳಗೆ ಹಲವು ಪುಟ್ಟ ಗುಹೆಗಳಿದ್ದು, ಎಲ್ಲವನ್ನೂ ನೋಡುವುದು ಅಸಾಧ್ಯದ ಮಾತು.
ಕರ್ಣ ಛಪ್ಪರ ಗುಹೆ
ಕರ್ಣ ಛಪ್ಪರ ಗುಹೆಯು ಸುಪ್ರಿಯಾ ಗುಹೆಯೆಂದೂ ಕರೆಯಲ್ಪಡುತ್ತದೆ. ಇದನ್ನು ರಾಜಾ ಅಶೋಕನ ಪಟ್ಟಾಭಿಶೇಕದ 16ನೆಯ ವರ್ಷದಲ್ಲಿ ರಚಿಸಲಾಯಿತು. ಆ ಕಾಲದ ಶಿಲಾಬರಹವು ಇಲ್ಲಿ ಈಗಲೂ ಕಾಣಸಿಗುತ್ತದೆ. ಅವುಗಳ ಪ್ರಕಾರ ಈ ಬೆಟ್ಟಗಳು ಸಾಲಾಟಿಕವೆಂದೂ ಕರೆಯಲ್ಪಡುತ್ತಿದ್ದವು. ಈ ಗುಹೆಗಳು ಮಿಶ್ರ ವಾಸ್ತುಶಿಲ್ಪದ ಉತ್ಪನ್ನಗಳಾಗಿವೆ. ನುಣುಪು ಮೇಲೈ ಇರುವ ಚೌಕಾಕಾರದ ಪ್ರತ್ಯೇಕವಾದ ಕೋಣೆಯೊಂದು ಇಲ್ಲಿ ಕಂಡುಬರುತ್ತದೆ.
ವಾಪಿಕಾ ಗುಹೆಗಳು
ಬೆಟ್ಟಗಳ ನಡುವೆ ಇರುವ ಏಳು ಗುಹೆಗಳ ಒಳಗೆ ನೀಡಿರುವ ಮಾಹಿತಿಗಳು ಇದನ್ನು ಯೋಗಾನಂದನೆಂಬ ಓರ್ವ ಬ್ರಾಹ್ಮಣ ರಚಿಸಿದನೆಂಬ ವಿಷಯವನ್ನು ಹೇಳುತ್ತವೆ. ದೇಗುಲದ ಆಂಗಣದೊಳಗಿರುವ ಶಿಲೆಯಲ್ಲಿರುವ ಕೆತ್ತನೆಗಳು ಇದು ಶಿವಾರಾಧನೆಯ ಪುರಾತನ ಸ್ಥಾನವೆನ್ನುವುದನ್ನು ಸ್ಪಷ್ಟಪಡಿಸುತ್ತವೆ. ಇನ್ನೊಂದು ದೃಷ್ಟಿಕೋನದ ಪ್ರಕಾರ, ಪುರಾತನ ಕಾಲದಲ್ಲಿ, ಕೌಲ ಮತ ಮಗಧ ಪ್ರದೇಶದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಹಾಗೂ ಈ ಸ್ಥಾನವು ಅವರ ಚಟುವಟಿಕೆಗಳ ಕೇಂದ್ರಸ್ಥಾನವಾಗಿತ್ತು. ಇದರ ಮೂಲವು ಸುಮಾರು ಕ್ರಿ.ಪೂ. 600. ಇದು ದಶರಥ ಮಹಾರಾಜನಿಂದ ಅಜ್ವೈಕ ಮತದ ಅನುಯಾಯಿಗಳಿಗಾಗಿ ಅರ್ಪಿಸಲ್ಪಟ್ಟಿತ್ತು.
ವಿಶ್ವ ಜೋಪ್ರಿ
ಈ ಗುಹೆಯಲ್ಲಿ ಎರಡು ಆಯತಾಕಾರದ ಕೋಣೆಗಳಿದ್ದು, ಶಿಲೆಯಲ್ಲಿ ಕೊರೆದ ಅಶೋಕನ ಮೆಟ್ಟಿಲುಗಳನ್ನು ಏರುವುದರ ಮೂಲಕ ಇಲ್ಲಿಗೆ ತಲಪಬಹುದಾಗಿದೆ.
ನಾಗಾರ್ಜುನ ಗುಹೆಗಳು
ನಾಗಾರ್ಜುನ ಗುಹೆಗಳು ಸಣ್ಣದಾಗಿದ್ದು ಹತ್ತಿರದ ಬರಾಬರ್ ಗುಹೆಗಳಿಂದ ಹೆಚ್ಚು ಆಧುನಿಕ ಕಾಲದ್ದಾಗಿವೆ.
ಗೋಪಿಕಾ ಗುಹೆಗಳು ಹಾಗ ವಾಪಿಯಾ ಗುಹೆಗಳು ಸುಮಾರು ಕ್ರಿ.ಪೂ. 232ರಲ್ಲಿ ದಶರಥ ಮಹಾರಾಜನ ಕಾಲದಲ್ಲಿ ಅಜ್ವೈಕ ಮತದ ಅನುಯಾಯಿಗಳಿಗಾಗಿ ಅರ್ಪಿಸಲ್ಪಟ್ಟಿತ್ತು.
ಬರಾಬರ್ ಬೆಟ್ಟಗಳಲ್ಲಿರುವ ಈ ಗುಹೆಗಳನ್ನು ಭಾರತೀಯ ಪ್ರಾಕ್ತನ ಶಾಸ್ತ್ರ ಸರ್ವೇಕ್ಷಣೆಯು ಸಂರಕ್ಷಿತ ತಾಣವೆಂದು ಘೋಷಿಸಿದೆ. ಈ ಗುಹೆಗಳನ್ನು ಕೊರೆಯಲು ಉಪಯೋಗಿಸಿದ ಮುಖ್ಯ ಶಿಲೆಯನ್ನು ವೀಕ್ಷಿಸಲು ಜನರೂ ಈಗಲೂ ಮುಗಿಬೀಳುತ್ತಾರೆ. ಪ್ರವಾಸಿಗರು ಇಲ್ಲಿಗೆ ಪಿಕ್ನಿಕ್ಕಿಗಾಗಿ ಆಗಾಗ ಬರುತ್ತಾರೆ. ಭಕ್ತರು ಹಾಗೂ ಪ್ರವಾಸಿಗರು ವರ್ಷಪೂರ್ತಿ ಭೇಟಿ ನೀಡುತ್ತಾರೆ. ಆದರೆ, ಶ್ರಾವಣ ಮಾಸ ಹಾಗೂ ವಸಂತ ಪಂಚಮಿ ಮತ್ತ ಮಹಾಶಿವರಾತ್ರಿಯ ಹಬ್ಬಗಳ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ.