ನಂಬಿಕೆ/ವಿಶ್ವಾಸ ಎನ್ನುವುದು ಜನರಲ್ಲಿ ವಿಚಿತ್ರ ಸಂಪ್ರದಾಯಗಳನ್ನು ಹುಟ್ಟುಹಾಕುತ್ತದೆ. ಭಾರತದಲ್ಲಿ ಲಕ್ಷಾಂತರ ದೇವಸ್ಥಾನಗಳಿವೆ. ಕೆಲವು ದೇವಸ್ಥಾನಗಳಲ್ಲಿ ವಿಚಿತ್ರ ಹಾಗೂ ವಿಶೇಷ ರೂಢಿಗಳು ಚಾಲ್ತಿಯಲ್ಲಿವೆ. ಭಕ್ತರು ಮೂಲದೇವರಿಗೆ ವಿಶಿಷ್ಟ/ವಿಚಿತ್ರ ಕೊಡುಗೆ ಅರ್ಪಿಸಿದ ದೇವಸ್ಥಾನಗಳ ಪಟ್ಟಿ ಇಲ್ಲಿದೆ:
ಕಾಲ ಭೈರವ ದೇವಸ್ಥಾನ, ಉಜ್ಜಯಿನಿ, ಮಧ್ಯಪ್ರದೇಶ: ಸಾಮಾನ್ಯವಾಗಿ ಯಾವುದೇ ದೇವಸ್ಥಾನದ ಒಳಗೆ ಹಾಗೂ ಅದರ ಸುತ್ತಲಿನ ವ್ಯಾಪ್ತಿಯಲ್ಲಿ ಮದ್ಯಪಾನ/ಮಾರಾಟ ನಿಷಿದ್ಧ. ಆದರೆ ಈ ದೇವಸ್ಥಾನದಲ್ಲಿ ಆ ನಿಷೇಧವಿಲ್ಲ. ಇಲ್ಲಿ ಭಕ್ತರು, ಹೂ-ಹಣ್ಣು ತೆಂಗಿನಕಾಯಿಯಲ್ಲದೆ ಮೂಲದೇವರಾದ ಕಾಲ ಭೈರವನಿಗೆ ಒಂದು ಸೀಸೆ ಮದ್ಯವನ್ನೂ(ಹೆಂಡ) ಅರ್ಪಿಸುವ ರೂಢಿಯಿದೆ.ಹಾಗಾಗಿ ದೇವಸ್ಥಾನದ ಹೊರಗೆ ಮದ್ಯ ಮಾರಾಟ ಮಾಡುವ ಅಂಗಡಿಗಳಿವೆ.
ಬ್ರಹ್ಮ ಬಾಬಾ ದೇವಸ್ಥಾನ, ಜೌನ್ಪುರ, ಉತ್ತರಪ್ರದೇಶ: ಇಲ್ಲಿನ ಘರಿವಾಲೆ ಬಾಬಾ ದೇವಸ್ಥಾನದಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸಲು, ಭಕ್ತಾದಿಗಳು ಮೂಲದೇವರಿಗೆ ಗೋಡೆ ಗಡಿಯಾರಗಳನ್ನು ಅರ್ಪಿಸುತ್ತಾರೆ. ಈ ರೀತಿ ಗೋಡೆ ಗಡಿಯಾರವನ್ನು ಅರ್ಪಿಸುವ ಜನರ ಮನೋಭೀಷ್ಟೆ ಈಡೇರುತ್ತದೆ ಎಂದು ಜನರು ನಂಬುತ್ತಾರೆ. ಪ್ರತಿ ದಿನ ಈ ದೇವಸ್ಥಾನದಲ್ಲಿ 80-100 ಗೋಡೆ ಗಡಿಯಾರಗಳು ಅರ್ಪಿತವಾಗುತ್ತವೆ.
ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರ, ಜಲ್ಲಂಧರ್, ಪಂಜಾಬ್ : ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬರುತ್ತಾರೆ. ಅವರಲ್ಲಿ ಕೆಲವರು, ತಾವು ವಿದೇಶಕ್ಕೆ ಹೋಗಬೇಕೆಂದು ಕೋರಿಕೊಂಡು ಆಟದ ವಿಮಾನಗಳನ್ನು ಅರ್ಪಿಸುತ್ತಾರೆ.ಈ ದೇವಸ್ಥಾನ ಹವಾಯಿ ಜಹಾಜ್(ವಿಮಾನ) ದೇವಸ್ಥಾನ ಎಂದೂ ಪ್ರಸಿದ್ಧಿಯಾಗಿದೆ.
ನಾಗರಾಜ ದೇವಸ್ಥಾನ, ಮನ್ನರಸಾಲ, ಕೇರಳ: ಗರ್ಭಧರಿಸಲು ಮಹಿಳೆಯರು ಈ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಕೋರಿಕೆ ಸಲ್ಲಿಸುತ್ತಾರೆ. ಅವರ ಇಚ್ಛೆ ಈಡೇರಿದರೆ, ಅವರು ಪುನಃ ದೇವಸ್ಥಾನಕ್ಕೆ ಭೇಟಿ ನೀಡಿ ದೇವರನ್ನು ಸಂತೃಪ್ತಗೊಳಿಸಲು ಹಾವಿನ ಪ್ರತಿಮೆಗಳನ್ನು ಕೊಡುಗೆಯಾಗಿ ಅರ್ಪಿಸುತ್ತಾರೆ
ಬಾಲಾಜಿ ಮಂದಿರ, ಮೆಹೆಂದಿಪುರ, ರಾಜಾಸ್ಥಾನ : ಭೂತ ಹಿಡಿದ ಜನರಿಗೆ ಇಲ್ಲಿ ಭೂತದ ಕಾಟದಿಂದ ಮುಕ್ತಿ ನೀಡಲಾಗುತ್ತದೆ ಎಂದು ಭಕ್ತರು ನಂಬುತ್ತಾರೆ. ಅದಕ್ಕೆ ಕೊಡುಗೆಯಾಗಿ ಅವರು ತಮ್ಮ ಮುಡಿಯನ್ನು ಅರ್ಪಿಸುತ್ತಾರೆ. ಭೂತ ಹಾಗೂ ಕೆಟ್ಟ ಶಕ್ತಿಗಳು ಮುಡಿಯಲ್ಲಿ ಬಂಧಿಸಲ್ಪಟ್ಟಿರುತ್ತವೆ ಎಂದು ಜನರ ನಂಬಿಕೆ. ಹಾಗಾಗಿ ಅರ್ಪಿಸಿದ ಮುಡಿಯನ್ನು ದೇವಸ್ಥಾನದ ಹೊರಗೆ ತೂಗುಬಿಡುತ್ತಾರೆ.
ಕರ್ಣಿ ಮಾತ ದೇವಸ್ಥಾನ, ಡೇಸ್ ನೋಕೆ, ರಾಜಾಸ್ಥಾನ : ಈ ದೇವಸ್ಥಾನ ಇಲಿಗಳ ದೊಡ್ದ ಸಂತತಿಗೆ ನೆಲೆಯಾಗಿರುವುದಕ್ಕೆ ಪ್ರಸಿದ್ಧಿ ಪಡೆದಿದೆ. ತಮಮ್ ಮನೋಭಿಲಾಷೆ ಈಡೇರಿದ ಭಕ್ತರು, ಈ ದೇವಸ್ಥಾನಕ್ಕೆ ಬೆಳ್ಳಿಯಲ್ಲಿ ಮಾಡಿದ ಇಲಿಯೊಂದನ್ನು ಅರ್ಪಿಸಬೇಕೆನ್ನುವ ನಂಬಿಕೆಯಿದೆ. ದೇವಸ್ಥಾನದೊಳಗಿರುವ ಪವಿತ್ರ ಇಲಿಗಳಲ್ಲಿ ಒಂದು ಸತ್ತರೆ, ಅದರ ಬದಲಿಗೆ ಚಿನ್ನದ ಇಲಿಯನ್ನು ಮಾಡಿಸಬೇಕು.